ಸಾಹಿತ್ಯ ಸಮ್ಮೇಳನ-ಪ್ರಶಸ್ತಿ ಪ್ರದಾನ
ಹೆಬ್ರಿ ಗೌರೀಶ ಕಾಯ್ಕಿಣಿ ವೇದಿಕೆ
ಮೂಡುಬಿದಿರೆ ಶ್ರೀವಿದ್ಯಾಲಯ ಅರ್ಪಿಸುವ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ ಮತ್ತು ಹೆಬ್ರಿ ಚಾರದ ಜವಾಹರ್ ನವೋದಯ ವಿದ್ಯಾಲಯದ ಸಹಕಾರದಲ್ಲಿ ಶುಕ್ರವಾರ ರಾತ್ರಿ ನಡೆದ ೪ನೇ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಗೌರವಿಸಲಾಯಿತು.
ಎಎಸ್ಎನ್ ಹೆಬ್ಬಾರ್ರಿಗೆ ಕರ್ನಾಟಕ ಸಮಾಜ ಸೇವಾ ರತ್ನ, ಉಡುಪಿಯ ಪ್ರೊ. ಶಂಕರ್ಗೆ ಕರ್ನಾಟಕ ಜಾದೂ ಜಾಗೃತಿ ರತ್ನ, ಇಂದಿರಾ ಹಾಲಂಬಿಗೆ ಕರ್ನಾಟಕ ಮಹಿಳಾ ರತ್ನ, ಶಿರ್ತಾಡಿ ವಿಲಿಯಂ ಪಿಂಟೋಗೆ ಕರ್ನಾಟಕ ಸಮಾಜ ರತ್ನ, ಮಣಿಪಾಲದ ಪಿ.ಎನ್ ಆಚಾರ್ಯರಿಗೆ ಕರ್ನಾಟಕ ಕಲಾ ರತ್ನ, ರಾಜಾ ಎಲ್.ದುರ್ಗ್ಗೆ ಕರ್ನಾಟಕ ಕೃಷಿಕ ರತ್ನ, ಬೆಳುವಾಯಿ ಸದಾನಂದ ಶೆಟ್ಟಿಗೆ ಕರ್ನಾಟಕ ಕಂಬಳ ರತ್ನ, ಇಳಕಲ್ ಈರಣ್ಣ ಕುಂದರಗಿ ಮಠ್ರಿಗೆ ಕರ್ನಾಟಕ ಸಾಹಸ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸಾಂಘಿಕ ಸಾಧನಾ ಗೌರವ
ಕಾರ್ಕಳದ ಕಾಂತಾವರ ಕನ್ನಡ ಸಂಘ, ಮುಂಬಯಿ ಕನ್ನಡ ಸೇವ ಸಂಘ ಪೊವಾಯಿ ಇವರಿಗೆ ಸಾಂಘಿಕ ಸಾಧನಾ ಗೌರವ ಪ್ರಧಾನ ನಡೆಯಿತು. ಇದೇ ಸಂದರ್ಭದಲ್ಲಿ ಸ್ಥಳೀಯ ಸಂಘ ಸಂಸ್ಥೆ ಮತ್ತು ಪ್ರಮುಖರನ್ನು ಗೌರವಿಸಲಾಯಿತು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಮಿತಿಯ ಗೌರವಾಧ್ಯಕ್ಷ ಶಾಸಕ ಗೋಪಾಲ ಭಂಡಾರಿ ಸಮ್ಮೇಳನದ ಮೂಲಕ ನಡೆಯುವ ಕನ್ನಡ ನಾಡು ನುಡಿಯ ಸೇವೆಯನ್ನು ಶ್ಲಾಘಿಸಿದರು. ಸಮಾರಂಭದಲ್ಲಿ ಸಮ್ಮೇಳನಾಧ್ಯಕ್ಷ ದೊಡ್ಡರಂಗೇ ಗೌಡ, ಉದ್ಘಾಟಕರಾದ ಡಾ. ಸುನೀತ ಶೆಟ್ಟಿ, ಎಸ್. ಆರ್. ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ನಾಗರಾಜ್ ಶೆಟ್ಟಿ, ವಿದ್ಯಾಲಯದ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಬಿ. ಕರುಣಾಕರ ಶೆಟ್ಟಿ, ಗೌರವಾಧ್ಯಕ್ಷ ಕೆ.ವಿ ಸುರೇಶ್ ಮುಂತಾದವರು ಉಪಸ್ಥಿತರಿದ್ದರು.
ಬಳಿಕ ಕವಿಗೋಷ್ಠಿ, ಯುವ ಕವಿಗೋಷ್ಠಿ ಮತ್ತು ವಿದ್ಯಾಲಯದ ವಿದ್ಯಾರ್ಥಿಗಳಿಂದ ವಿವಿಧ ಮನರಂಜನಾ ಕಾರ್ಯಕ್ರಮಗಳು ನಡೆಯಿತು.